ಬಳ್ಳಾರಿ: ಬ್ಯಾನರ್ ಗಲಾಟೆ ವಿಚಾರ – ಕೇಂದ್ರ ಸಚಿವ ವಿ. ಸೋಮಣ್ಣ ಕಿಡಿಕಾರಿಕೆ
ಬಳ್ಳಾರಿ, ಜ.(04 ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಬಳ್ಳಾರಿ ಜಿಲ್ಲೆಗೆ ಆಗಮಿಸಿ, ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಸೋಮಣ್ಣ ಅವರ ಇನ್ನು ಕೆಲವೇ ಕ್ಷಣಗಳಲ್ಲಿ ಬಿಜೆಪಿ ಹಿರಿಯ ನಾಯಕರು ಅರ್.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, “ಕಾಂಗ್ರೆಸ್ ಕೆಟ್ಟ ಸಂದೇಶ ನೀಡಲು ಬಳ್ಳಾರಿಯನ್ನು ಊರುಗೋಲು ಮಾಡಿಕೊಂಡಿದೆ. ಬಳ್ಳಾರಿ ಪಾದಯಾತ್ರೆಯ ಮೂಲಕ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದರು. ಸಿದ್ದರಾಮಯ್ಯ ಅಧಿಕಾರಕ್ಕೆ ಬರಲು ಬಳ್ಳಾರಿ ಜನರೇ ಕಾರಣ” ಎಂದು ಹೇಳಿದರು.
ಜನಾರ್ದನ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು ರಾಜಕೀಯ ದ್ವೇಷ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, “ಜನಾರ್ದನರನ್ನು ಟಾರ್ಗೆಟ್ ಮಾಡಿಕೊಂಡು ಅವರ ಕುಟುಂಬ ನಾಶ ಮಾಡಲು ಹೊರಟಿದ್ದಾರೆ. ಪಾಪದ ಕೊಡ ಇಲ್ಲಿಂದಲೇ ತುಂಬಿದೆ. ಈ ವರ್ಷ ಮುಗಿಯುವೊಳಗೆ ನೀವು ಕಳೆದು ಹೋಗ್ತೀರಾ” ಎಂದು ಕಟುವಾಗಿ ನುಡಿದರು.
ಶಾಸಕರಿಗೆ ಎಚ್ಚರಿಕೆ ನೀಡಿದ ಸೋಮಣ್ಣ, “ಶಾಸಕರಾದವರು ವ್ಯವಸ್ಥೆ ಅರಿತು ಕೆಲಸ ಮಾಡಬೇಕು. ವಾಲ್ಮೀಕಿ ಪುತ್ಥಳಿ ನೆಪವಿಟ್ಟು ಗಲಾಟೆ ಮಾಡಿದ್ದಾರೆ. ನೀವು ಪುತ್ಥಳಿ ಇಡುವುದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ, ಆದರೆ ವಾಲ್ಮೀಕಿ ವಿಷಯವನ್ನು ದುರುಪಯೋಗ ಮಾಡಿಕೊಂಡಿದ್ದಾರೆ” ಎಂದರು.
ನೈತಿಕತೆ ಪ್ರಶ್ನಿಸಿ, “ವಾಲ್ಮೀಕಿ ಹೆಸರನ್ನು ದುರ್ಬಳಕೆ ಮಾಡಿದ ಪಾಪಕ್ಕೆ ನೀವು ಹೊಣೆಗಾರರು. ಯಾರು ಸತೀಶ್ ರೆಡ್ಡಿ? ಯಾರು ಭರತ್ ರೆಡ್ಡಿ? ಧ್ವೇಷದ ರಾಜಕಾರಣವೇ ನಡೆಯುತ್ತಿದೆಯೇ?” ಎಂದು ಪ್ರಶ್ನಿಸಿದರು.
ಘಟನೆಗೆ ಸಂಚು ಕಾರಣವಿದೆ ಎಂದು ಹೇಳಿದ ಅವರು, “ಕಾಲು ಕರೆದುಕೊಂಡು ಜಗಳಕ್ಕೆ ಬಂದಿದ್ದಾರೆ. ಇದರ ಹಿಂದೆ ಕುತಂತ್ರ ಏನು? ರಾಮುಲು ಮತ್ತು ಕಾರ್ಯಕರ್ತರು ಬರದೇ ಇದ್ದಿದ್ದರೆ ಜನಾರ್ದನ ರೆಡ್ಡಿಯ ಪರಿಸ್ಥಿತಿ ಏನಾಗುತ್ತಿತ್ತು?” ಎಂದು ಆತಂಕ ವ್ಯಕ್ತಪಡಿಸಿದರು.
ತಮ್ಮ ರಾಜಕೀಯ ಅನುಭವವನ್ನು ಉಲ್ಲೇಖಿಸಿದ ಸೋಮಣ್ಣ, “ನನ್ನ ರಾಜಕೀಯ ಜೀವನದಲ್ಲಿ ಇಂತಹ ನಡವಳಿಕೆಯ ದುರಂಕಾರ ಇರುವ ವ್ಯಕ್ತಿಗಳನ್ನು ನಾನು ನೋಡಿಲ್ಲ. ಇದು ಹೇಯವಾದ ಕೃತ್ಯ. ಬಳ್ಳಾರಿಯನ್ನು ಉಪಯೋಗಿಸಿಕೊಂಡ ಕಾಂಗ್ರೆಸ್ ಮುಗಿದಿದೆ” ಎಂದು ಹೇಳಿದರು.
ಬಿ. ಶ್ರೀರಾಮುಲು ಕುರಿತು ಮಾತನಾಡಿದ ಅವರು, “ಭಗವಂತನ ರೂಪದಲ್ಲಿ ಶ್ರೀರಾಮುಲು ಬಂದಿದ್ದಾರೆ” ಎಂದು ಪ್ರಶಂಸಿಸಿದರು.
ಘಟನೆಯ ಪರಿಣಾಮವಾಗಿ ಅಮಾಯಕ ವ್ಯಕ್ತಿ ಸಾವನ್ನಪ್ಪಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಸೋಮಣ್ಣ, “ಜನಾರ್ದನ ರೆಡ್ಡಿಗೆ ಗರಿ ಇಟ್ಟು ಗುಂಡು ತಮಗೇ ತಿರುಗಿ ಬಿದ್ದಿದೆ. ಅಮಾಯಕನಾದ ರಾಜಶೇಖರ ಸಾವಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂದೇಶ ನೀಡಿದ ಅವರು, “ನಾನು ಸಿದ್ದರಾಮಯ್ಯ ಅವರ ಜೊತೆ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಸತ್ಯಾನಾಶದ ದಾರಿಗೆ ಹೋಗುತ್ತಿದೆ. ಇದರ ಪಾಪ ನಿಮಗೆ ತಟ್ಟಬಾರದು ಎಂದರೆ ಸಿದ್ದರಾಮಯ್ಯ ಅವರು ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು, ಸೋಮಶೇಖರ ರೆಡ್ಡಿ ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಅವರು ಉಪಸ್ಥಿತರಿದ್ದರು.