
ಬಳ್ಳಾರಿ, ಡಿ.03: ಬಳ್ಳಾರಿ ನಗರದಲ್ಲಿ ಅನಾವರಣ ಆಗಲಿರುವ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ನಿರ್ಮಾಣ ಕಾಮಗಾರಿ ನಾನು ಮಾಡುತ್ತಿಲ್ಲ, ನನ್ನ ಮೂಲಕ ಮಹರ್ಷಿ ವಾಲ್ಮೀಕಿಯವರ ಇಚ್ಛೆ ನೆರವೇರುತ್ತಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅಭಿಪ್ರಾಯಪಟ್ಟರು.
ಬುಧವಾರ ಸಂಜೆ ನಗರದ ಖಾಸಗಿ ಹೊಟೇಲಿನ ಸಭಾಂಗಣದಲ್ಲಿ ಬಳ್ಳಾರಿ ನಗರ - ಜಿಲ್ಲೆಯ ವಾಲ್ಮೀಕಿ ನಾಯಕರ ಸಮಾಜದ ಮುಖಂಡರು ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಅನಾವರಣ ಕಾರ್ಯಕ್ರಮದ ಎರಡನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ವಾಲ್ಮೀಕಿಯವರ ನೂತನ ಪುತ್ಥಳಿ ಸ್ಥಾಪಿಸುತ್ತಿರುವ ಶಾಸಕರನ್ನು ಶ್ಲಾಘಿಸಿದ ವಾಲ್ಮೀಕಿ ನಾಯಕರ ಸಮಾಜದ ಮುಖಂಡರ ಅಭಿಪ್ರಾಯಗಳಿಗೆ ಪ್ರತಿಯಾಗಿ ಅವರು ಪ್ರತಿಕ್ರಿಯಿಸಿದರು.
ನಾನಾಗಲಿ, ಮತ್ತೊಬ್ಬರಾಗಲಿ ಈ ಕಾರ್ಯ ಮಾಡುತ್ತಾರೆಂದರೆ ಅದು ಸರಿಯಲ್ಲ, ಶಾಸಕ ಭರತ್ ರೆಡ್ಡಿ ಮೂಲಕ ಹಾಗೂ ಅಯೋಧ್ಯೆಯ ರಾಮಲಲ್ಲಾನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕಲೆಯ ಮೂಲಕ ಸ್ವತಃ ಮಹರ್ಷಿ ವಾಲ್ಮೀಕಿಯವರ ಇಚ್ಛೆ ನೆರವೇರುತ್ತಿದೆ ಎಂದರು.
ಜ.03, 2026ರಂದು ಪುತ್ಥಳಿಯ ಅನಾವರಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ, ಕಾರ್ಯಕ್ರಮದಲ್ಲಿ ವಾಲ್ಮೀಕಿ ನಾಯಕರ ಸಮಾಜದ ಸಾವಿರಾರು ಜನರು ಭಾಗಿಯಾಗಲು ಬೇಕಾದ ರೀತಿಯಲ್ಲಿ ಸಮಿತಿಗಳನ್ನು ರಚಿಸಬೇಕು ಎಂದ ಅವರು ಈ ಕಾರ್ಯಕ್ರಮ ಪಕ್ಷಾತೀತವಾಗಿದ್ದು, ಎಲ್ಲ ಪಕ್ಷ ಸಂಘ ಸಂಸ್ಥೆಯವರೂ ಭಾಗಿಯಾಗಬೇಕು, ಈ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದರು.
ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಅನಾವರಣ ಕಾರ್ಯಕ್ರಮವನ್ನು ಮನೆಯ ಹಬ್ಬದಂತೆ ನಾವೆಲ್ಲ ಸೇರಿ ಯಶಸ್ವಿಗೊಳಿಸೋಣ ಎಂದರು.
ಸಭೆಯಲ್ಲಿ ಹಾಜರಿದ್ದು ಮಾತನಾಡಿದ ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ರಾಂಪ್ರಸಾದ್; ಜ.03ರ ಕಾರ್ಯಕ್ರಮದಲ್ಲಿ ವಾಲ್ಮೀಕಿ ನಾಯಕರ ಸಮಾಜದ ಜನರ ಭಾಗೀದಾರಿಕೆ ಬಹಳ ಮುಖ್ಯ, ಇದಕ್ಕೆ ಅನುಗುಣವಾಗಿ ಸಮಿತಿಗಳನ್ನು ರಚಿಸಿ, ಸಮಿತಿಗಳಲ್ಲಿರುವವರು ಕ್ರಿಯಾಶೀಲವಾಗಿ ಕೆಲಸ ಮಾಡಿದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ, ಕಾರ್ಯಕ್ರಮದ ಕುರಿತು ಮಾಜಿ ಸಚಿವ ಬಿ.ನಾಗೇಂದ್ರ ಅವರೊಂದಿಗೂ ಚರ್ಚಿಸಿರುವೆ, ಎಲ್ಲರೂ ಸೇರಿ ಪುತ್ಥಳಿ ಅನಾವರಣ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.
ಹಿರಿಯ ವಕೀಲ ಜಯರಾಂ ಅವರು ಮಾತನಾಡಿ; ಜ.03 ರ ಕಾರ್ಯಕ್ರಮದ ಬಗ್ಗೆ ವ್ಯವಸ್ಥಿತವಾಗಿ ಪ್ರಚಾರ ಮಾಡಬೇಕು, ವಿವಿಧ ಮಾಧ್ಯಮಗಳ ಮೂಲಕ ವಾಲ್ಮೀಕಿ ನಾಯಕರ ಸಮಾಜದ ಜನರಿಗೆ ಮಾಹಿತಿ ತಲುಪಿಸಬೇಕು ಹಾಗೂ ಕಾರ್ಯಕ್ರಮ ಯಶಸ್ಸಿಗೆ ಸಮಿತಿಗಳ ರಚನೆ ಮುಖ್ಯ ಎಂದರು.
ನಾರಾಯಣಪ್ಪ ಅವರು ಮಾತನಾಡಿ; ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ವಾಲ್ಮೀಕಿ ನಾಯಕರ ಸಮಾಜದ ಜನ ದೊಡ್ಡ ಸಂಖ್ಯೆಯಲ್ಲಿದ್ದಾರೆ, ಆದರೆ ಸ್ವಾತಂತ್ರ್ಯ ಸಿಕ್ಕ ಇಷ್ಟು ವರ್ಷಗಳಾದರೂ ಯಾರೂ ಕೂಡ ಮಹರ್ಷಿ ವಾಲ್ಮೀಕಿಯವರ ಇಂತಹ ಪುತ್ಥಳಿಯ ಸ್ಥಾಪನೆ ಮಾಡಲಿಲ್ಲ, ಇಂದು ನಗರ ಶಾಸಕ ನಾರಾ ಭರತ್ ರೆಡ್ಡಿಯವರ ಕಾರ್ಯ ಶ್ಲಾಘನೀಯ, ಇಂತಹ ಜನಪ್ರತಿನಿಧಿಗಳನ್ನು ಸಮಾಜದ ಜನ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸಭೆಗೂ ಮುನ್ನ ಮಹರ್ಷಿ ಶ್ರೀ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಮೀನಳ್ಳಿ ತಾಯಣ್ಣ, ಮಾಜಿ ಮೇಯರ್ ನಾಗಮ್ಮ, ಮಾಜಿ ಉಪ ಮೇಯರ್ ಜಾನಕಮ್ಮ, ಪಾಲಿಕೆಯ ಸದಸ್ಯ ಹನುಮಂತಪ್ಪ, ಕಾಂಗ್ರೆಸ್ ಮುಖಂಡರಾದ ಸದಾಶಿವಪ್ಪ, ವೀರೇಶಪ್ಪ, ಮೀಸೆ ರಾಮಣ್ಣ, ಪಿ.ಜಗನ್ನಾಥ, ಮುದಿಮಲ್ಲಯ್ಯ, ಮೋಕ ಮಲ್ಲಯ್ಯ, ಸೇರಿದಂತೆ ಹಲವರು ಹಾಜರಿದ್ದರು.
ಪರಶುರಾಮ, ಯರಗುಡಿ ಸೋಮಣ್ಣ, ಹಗರಿ ಗೋವಿಂದ, ಹಾವಂಭಾವಿ ಲೋಕೇಶ್, ಬೆಣಕಲ್ ಸುರೇಶ್, ಹೊಂಡ್ರಪ್ಪ, ಸಂಗನಕಲ್ಲು ವಿಜಯ್, ಬಸರಕೋಡು ಗೋವಿಂದು, ಟಿ.ಹೆಚ್.ಚರಣರಾಜ್, ಲಾಲಸ್ವಾಮಿ, ನರೇಂದ್ರ, ಗೌತಮ್ ಸಭೆಯ ನಿರ್ವಹಣೆ ಮಾಡಿದರು.
ಬೇನ್ಪಾಡ್ ಹನುಮಂತಪ್ಪ, ಮಾಜಿ ಮಹಾನಗರ ಪಾಲಿಕೆ ಸದಸ್ಯರು ಕಿಟ್ಟ, ಕಪ್ಪಗಲ್ಲು ರಾಮಣ್ಣ, ಕೆ.ನಾರಾಯಣಪ್ಪ, ಮೀನಳ್ಳಿ ವೆಂಕಟೇಶ್, ಬತ್ರಿ ಈರಣ್ಣ, ಅದ್ದಿಗೇರಿ ರಾಮಣ್ಣ, ಕಗ್ಗಲ್ ವೀರೇಶಪ್ಪ, ಪೋಸ್ಟ್ ವೆಂಕಟೇಶ್, ವಕೀಲರು ಬಾದಾಮಿ ಶಿವಲಿಂಗ ನಾಯಕ, ನಾಗರಾಜ ನಾಯಕ, ಬಾಲರಾಜು, ಹರಿ, ಪುಷ್ಪಲತಾ, ರಾಯಪುರ ಮರಿಸ್ವಾಮಿ, ಮೋಕ ಗೋವಿಂದಪ್ಪ, ಪೆದ್ದ ಎರ್ರಿಸ್ವಾಮಿ ಸ್ವಾಮಿ, ಮೋಕ ರಾಮಯ್ಯ, ಅಲ್ಲಿಪುರ ವೆಂಕಟಸ್ವಾಮಿ, ದುರ್ಗಾ ಮೋಹನ್, ಬಜ್ಜಪ್ಪ ಸೇರಿದಂತೆ ಹಲವರು ಹಾಜರಿದ್ದರು.