ಆಡಳಿತದಲ್ಲಿ ಭ್ರಷ್ಟಾಚಾರ ಸರ್ವವ್ಯಾಪಿ, ಚುನಾವಣೆಯಲ್ಲಿ ದುಡ್ಡು ತಗೊಂಡು ಮತದಾನ ಮುನ್ನ ಯೋಚಿಸಿ, ಕುರ್ಚಿ, ಸಂಪತ್ತು ಕ್ಷಣಿಕ, ನಾವು ಮಾಡುವ ಕೆಲಸಕ್ಕೆ ಮಾತ್ರ ಗೌರವ; ಬಿ.ವೀರಪ್ಪ
ವಿಜಯನಗರ

ಮಾರ್ಚ್.(13)ಬಳ್ಳಾರಿ /ವಿಜಯನಗರ ಆಡಳಿತದಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಪಾಲ್ ಮಸೂದೆ ಸೇರಿದಂತೆ ಲೋಕಾಯುಕ್ತ ಸಂಸ್ಥೆಯನ್ನು ಜಾರಿಗೆ ತಂದಿದ್ದರೂ ಭ್ರಷ್ಟಾಚಾರ ಅಕ್ಟೋಪಾಸ್ ನಂತೆ ಸರ್ವವ್ಯಾಪಿಯಾಗಿದ್ದು ಸರಿಪಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನ ಧಂಗೆ ಏಳಬಹುದು ಎಂದು ಉಪ ಲೋಕಾಯುಕ್ತರಾದ ಬಿ.ವೀರಪ್ಪನವರು ತಿಳಿಸಿದರು.
ಅವರು ಗುರುವಾರ ದಿಂದ ಶನಿವಾರದ ವರೆಗೆ ಮೂರು ದಿನಗಳ ಕಾಲ ವಿಜಯನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು ಮಾ.13 ರಂದು ಹೊಸಪೇಟೆ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲು, ಕುಂದುಕೊರತೆಗಳ ದೂರು ವಿಚಾರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಶೇ 95 ರಷ್ಟು ಜನರು ದೇಶಭಕ್ತರಾಗಿದ್ದರು, ಶೇ 5 ರಷ್ಟು ಮಾತ್ರ ಮೀರ್ ಸಾಧಿಕ್ ಜನರಿದ್ದರು. ಆದರೆ ಸ್ವಾತಂತ್ರ್ಯ ನಂತರ ಮೀರ್ ಸಾಧಿಕ್ ಜನರ ಸಂಖ್ಯೆ ಹೆಚ್ಚಿದ್ದು ಭ್ರಷ್ಟಾಚಾರ ಹೆಚ್ಚಿದೆ. ಆಸ್ಪತ್ರೆ, ಹಾಸ್ಟೆಲ್, ಖಾತೆ ಮಾಡಲು ವಿಳಂಬ, ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಅಲೆದಾಟ ಸೇರಿದಂತೆ ಜನರನ್ನು ಅಲೆದಾಡಿಸುವ ಕೆಲಸ ಜಾಸ್ತಿಯಾಗುತ್ತಿದೆ. ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಯವರು ಜನರ ತೆರಿಗೆ ಹಣದಿಂದ ಸಂಬಳ ಪಡೆದು ಕೆಲಸ ಮಾಡುತ್ತಿಲ್ಲ, ಎಲ್ಲಾ ಅಂಗಳಿದ್ದರೂ ತಮ್ಮ ಕರ್ತವ್ಯ ಶ್ರದ್ದೆ ಇಲ್ಲದಂತಾಗಿದ್ದು ಬಡಿದೆಬ್ಬಿಸಬೇಕಾಗಿದೆ. ಜನರ ಹಕ್ಕುಗಳನ್ನು ಮೊಟಕುಗೊಳಿಸಲು ನಾವ್ಯಾರು, ಅಧಿಕಾರಿಗಳು ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಬೇಕಿದೆ.
ಬಸ್ ನಿಲ್ದಾಣಕ್ಕೆ ಭೇಟಿ; ಬೆಳ್ಳಂಬೆಳಗ್ಗೆ ಹೊಸಪೇಟೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದಾಗ ಇಲ್ಲಿ ರಸ್ತೆಯೇ ಬಯಲು ಶೌಚಾಲಯವಾಗಿದೆ. ಮತ್ತು ಇಲ್ಲಿನ ಸ್ಟಾಲ್ಗಳಲ್ಲಿ ಅವಧಿ ಮೀರಿದ ತಂಪು ಪಾನೀಯಗಳು ಕಂಡು ಬಂದಿದ್ದು ಇಲ್ಲಿನ ಲೋಪದೋಷಗಳ ವಿರುದ್ದವಾಗಿ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ ಎಂದರು.
ಜನರು ಸಹ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ತಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ. ಇಲ್ಲಿನ ಬಸವ ಹಾಗೂ ರಾಯ ಕಾಲುವೆಗೆ ಮನೆ ಶೌಚದ ನೀರು, ಅನೈರ್ಮಲ್ಯದ ನೀರನ್ನು ಬಿಡುತ್ತಿದ್ದು ಇದೇ ನೀರು ಕೃಷಿಗೆ ಬಳಕೆಯಾಗಿ ವಿಷಪೂರಿತ ಆಹಾರ ತಿನ್ನುವಂತಾಗಿದೆ. ನಾಗರಿಕರಾದ ಎಲ್ಲರ ಕರ್ತವ್ಯಗಳು ಬಳ ಮುಖ್ಯವಾಗಿದ್ದು ವಿಜಯನಗರದ ಗತವೈಭವ ಮೆರೆಯಲು ಇಲ್ಲಿನ ಸ್ವಚ್ಚತೆ ಕಾಪಾಡಿಕೊಳ್ಳಬೇಕೆಂದರು.
ಮತ ಮಾರಿಕೊಳ್ಳಬೇಡಿ; ನಾಗರಿಕ ಸಮಾಜ ಬದಲಾಗುವ ಅವಶ್ಯಕತೆ ಇದ್ದು ಚುನಾವಣೆಯಲ್ಲಿ ನಾವು ಆಯ್ಕೆ ಮಾಡುವ ನಾಯಕನ ಆಯ್ಕೆ ದುಡ್ಡುತಗೊಂಡು ಮತದಾನ ಮಾಡಬಾರದು. ಮತದಾರ ಪ್ರಭುಗಳಾಗಬೇಕು, ಮತ ಮಾರಿಕೊಂಡು ಜವಾನರಾಗಬಾರದು. ಯಾರು ಒಳ್ಳೆಯ ವ್ಯಕ್ತಿ ಎಂದು ಅರಿತು ಸಮಾಜ, ನಾಡು, ದೇಶಾಭಿವೃದ್ದಿ ಕಾಳಜಿ ಇರುವ ವ್ಯಕ್ತಿಗೆ ದುಡ್ಡು ಇಲ್ಲದೆ ಗುರುತಿಸಿ ಮತದಾನ ಮಾಡಲು ತಿಳಿಸಿದರು.
ಸರ್ವರಿಗೂ ಸಮಾನ ಅವಕಾಶ; ಸಂವಿಧಾನದ ಅನುಚ್ಚೇಧ 14 ರನ್ವಯ ಸರ್ವರಿಗೂ ಸಮಪಾಲು, ಸಮಾನ ಅವಕಾಶ ಇದೆ. 21 ರ ವಿಧಿಯನ್ವಯ ಎಲ್ಲರೂ ಗೌರವದಿಂಧ ಬದುಕಬೇಕು. ಇದಕ್ಕಾಗಿ ಹಕ್ಕುಗಳನ್ನು ನೀಡಲಾಗಿದೆ. 51 ಎ ರನ್ವಯ ನಾಗರಿಕರ ಕರ್ತವ್ಯಗಳ ಬಗ್ಗೆ ತಿಳಿಸಲಾಗಿದ್ದು ಇವುಗಳನ್ನು ನಾವೆಲ್ಲರೂ ಮರೆತು, ಪ್ರಶ್ನಿಸುವ ಮನೋಭಾವ ಇಲ್ಲದಿರುವುದರಿಂದ ಇಂತಹ ಭ್ರಷ್ಟಾಚಾರಗಳು ನಡೆಯಲು ಸಾಧ್ಯವಾಗಿದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಶೇ 18 ರಷ್ಟಿದ್ದ ಸಾಕ್ಷರತಾ ಪ್ರಮಾಣ ಈಗ ಶೇ 80 ರಷ್ಟಿದ್ದರೂ ಭ್ರಷ್ಟಾಚಾರ ಹೆಚ್ಚಾಗಿದೆ. ಆದರೂ ಪ್ರಪಂಚದಲ್ಲಿ ಅಗ್ರಗಣ್ಯ ದೇಶಗಳಲ್ಲಿ 5 ನೇ ಸ್ಥಾನದಲ್ಲಿದ್ದು ಆಡಳಿತದಲ್ಲಿ ಸುಧಾರಣೆ ತರುವ ಮೂಲಕ ಎಲ್ಲರೂ ಸೇರಿ ಅಭಿವೃದ್ದಿಗೆ ಕೈಜೋಡಿಸಬೇಕಾಗಿದೆ ಎಂದರು.
ಭ್ರಷ್ಟಾಚಾರ ಮನೆಯಿಂದಲೇ ತೊಲಗಿಸಿ; ನಾನು ಎಂಬ ಸಂಪಾದನೆಯಿಂದ ಭ್ರಷ್ಟಾಚಾರ ಹೆಚ್ಚಿದೆ. ಭ್ರಷ್ಟಾಚಾರದ ಹಣದಿಂದ ಬಟ್ಟೆಯನ್ನು ಕೊಳ್ಳುವುದಿಲ್ಲ, ಒಡವೆ ಖರೀದಿ ಮಾಡುವುದಿಲ್ಲ ಎಂಬ ಧೋರಣೆ ಮನೆಯಿಂದ ಆರಂಭವಾಗಬೇಕು. ಆದರೆ ಸಮಾಜದಲ್ಲಿ ಭ್ರಷ್ಟತೆಯಿಂದ ಹಣ ಸಂಪಾದಿಸಿದವರ ಹಿಂದೆ ನೊಣಗಳಂತೆ ಮುತ್ತಿಕೊಳ್ಳುತ್ತಾರೆ. ಸಮಾಜ ನೋಡುವ ದೃಷ್ಟಿಯು ಸಹ ಬದಲಾಗಬೇಕಿದ್ದು ಕುರ್ಚಿ ಮತ್ತು ಸಂಪತ್ತು ಎಂದಿಗೂ ಶಾಶ್ವತವಲ್ಲ, ನಾವು ಮಾಡಿದ ಕೆಲಸ ಮಾತ್ರ ಗೌರವ ತಂದುಕೊಡುವುದರಿಂದ ಸೇವೆ ಮಾಡಲು ಸಿಕ್ಕಿರುವ ಅವಕಾಶವನ್ನು ಸಾರ್ವಜನಿಕರ ಕಣ್ಣೀರು ಒರೆಸುವ ಕೆಲಸ ಮಾಡಬೇಕೆಂದು ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿದರು.
ಸುಳ್ಳು ದೂರು ನೀಡಿದಲ್ಲಿ ಕ್ರಮ; ಲೋಕಾಯುಕ್ತದಲ್ಲಿ ದಾಖಲಾದ ದೂರುಗಳಲ್ಲಿ ಶೇ 30 ರಷ್ಟು ಸುಳ್ಳು ಕೇಸ್ಗಳನ್ನು ನೀಡಲಾಗಿದೆ. ಆದರೆ ಲೋಕಾಯುಕ್ತ ಸೆಕ್ಷನ್ 20 ರನ್ವಯ ಸುಳ್ಳು ದೂರು ನೀಡಿದಲ್ಲಿ 3 ವರ್ಷ ಜೈಲಿಗೆ ಕಳುಹಿಸಲಾಗುತ್ತದೆ. ಪ್ರಾಮಾಣಿಕ ಅಧಿಕಾರಿಗಳು ಇಂತಹ ದೂರುಗಳಿಂದ ಎದರುವ ಅವಶ್ಯಕತೆ ಇಲ್ಲ, ಭಯಪಡದೆ ಪ್ರಾಮಾಣಿಕವಾದ ಸೇವೆ ಮಾಡಿದವರಿಗೆ ಲೋಕಾಯುಕ್ತ ಎಂದಿಗೂ ರಕ್ಷಣೆ ನೀಡಲಿದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ.ಶಾಂತಾ ಮಾತನಾಡಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸರ್ಕಾರಿ ಅಧಿಕಾರಿ, ಸಿಬ್ಬಂದಿಯವರು ಸಾಕ್ಷಿ ನುಡಿಯುವಾಗ ವ್ಯತಿರಿಕ್ತ ಸಾಕ್ಷಿ ಹೇಳುವುದರಿಂದ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಯಾಗುತ್ತವೆ. ಹಳ್ಳಿಯಲ್ಲಿರುವ ಸಾಮಾನ್ಯ ವ್ಯಕ್ತಿ ಸರಿಯಾದ ಸಾಕ್ಷಿ ಹೇಳುತ್ತಾರೆ, ಸರ್ಕಾರಿ ಅಧಿಕಾರಿಗಳು ಸಾಕ್ಷಿಯ ವೇಳೆ ತಿರುಚುತ್ತಾರೆ, ಈ ಬಗ್ಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪರಿಶೀಲಿಸಬೇಕೆಂದರು.
ತಂದೆ, ತಾಯಿಗಳು ತಮ್ಮ ಮಕ್ಕಳನ್ನು ಚಿಕ್ಕಂದಿನಿಂದಲೇ ಸತ್ಪ್ರಜೆಯಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕತೆ ಬಗ್ಗೆ ತಿಳುವಳಿಕೆ ಮೂಡಿಸಬೇಕು. ನಾವು ಪ್ರಾಮಾಣಿಕವಾಗಿ ದುಡಿಮೆ ಮಾಡಿ ಬದುಕಬೇಕು, ಆದರೆ ಬೇರೆಯವರು ಐದು ಹಂತಸ್ತಿನ ಮನೆ ಕಟ್ಟುತ್ತಾರೆ ಎಂದು ಕೈಲಾಗದನ್ನು ಮಾಡದೇ ಹಾಸಿಗೆ ಇದ್ದಷ್ಟು ಕಾಲುಚಾಚು ಎಂಬಂತೆ ಜೀವನ ನಡೆಸಿದಾಗ ಮಾತ್ರ ಭ್ರಷ್ಟರಾಗದೇ ಪ್ರಾಮಾಣಿಕರಾಗಲು ಸಾಧ್ಯ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಉಪನಿಬಂಧಕರಾದ ಪೃಥ್ವಿ ವರ್ಣೀಕರ್, ಅರವಿಂದ ಎನ್.ವಿ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ನಂದಗಡಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ ಎನ್.ಹೊಸಮನಿ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಪೊಲೀಸ್ ಅಧೀಕ್ಷಕರಾದ ಬಿ.ಎಲ್.ಹರಿಬಾಬು, ಲೋಕಾಯುಕ್ತ ಎಸ್.ಪಿ ಸಿದ್ದರಾಜ್ ಹಾಗೂ ವಿವಿಧ ನ್ಯಾಯಾಧೀಶರು, ಅಧಿಕಾರಿಗಳು ಉಪಸ್ಥಿತರಿದ್ದರು.
